ಇಂದು ದೇಶವು ಭಯೋತ್ಪಾದನೆ , ನಕ್ಸಲ್ ಸೇರಿದಂತೆ ವಿವಿಧ ಸಮಸ್ಯೆಗಳು ಸವಾಲಾಗಿದೆ. ಹೀಗಾಗಿ ದೇಶದ ಮುಂದಿರುವ ಈ ಸವಾಲುಗಳನ್ನು ಎದುರಿಸಲು ಯುವಜನತೆ ಸೇರಿದಂತೆ ಎಲ್ಲರೂ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ದರಾಗಬೇಕಿದೆ ಎಂದು ಪುತ್ತೂರು ಸಹಾಯಕ ಕಮೀಶನರ್ ಎಚ್.ಪ್ರಸನ್ನ ಹೇಳಿದರು.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಬುಧವಾರದಂದು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲ್ಪಟ್ಟ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಪುತ್ತೂರು ಸಹಾಯಕ ಕಮೀಶನರ್ ಎಚ್.ಪ್ರಸನ್ನ ನೆರವೇರಿಸಿದರು. ಬಳಕ ಮಾತನಾಡಿದ ಅವರು , ದೇಶವನ್ನು ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದ ಬ್ರಿಟಿಷರ ದಾಸ್ಯದಿಂದ ಅಹಿಂಸೆಯ ಮೂಲಕ ಬಿಡಿಸಿಕೊಂಡ ಭಾರತೀಯರು ಹಾಗೂ ಮಹಾನ್ ಪುರುಷರುಗಳನ್ನು ನೆನೆಪು ಮಾಡಿಕೊಳ್ಳಬೇಕು ಎಂದ ಅವರು ಸ್ವಾತಂತ್ರ್ಯದ ಬಳಿಕ ಅನೇಕ ಸಾಧನೆಗಳನ್ನು ದೇಶದಲ್ಲಿ ಮಾಡಲು ಸಾಧ್ಯ ಆಗಿದೆ. ಈಗ ದೇಶವು ಇನ್ನಷ್ಟು ಬಲಿಷ್ಟವಾಗಲು ಸಕರ್ಾರದ ಎಲ್ಲಾ ಯೋಜನೆಗಳು ತಳಮಟ್ಟದವರೆಗೆ ತಲುಪಲು ಪ್ರಯತ್ನ ನಡೆಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕಿ ಮಲ್ಲಿಕಾ ಪ್ರಸಾದ್, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಪುರುಷರುಗಳ ಜೀವನ ಪಾಠವು ಇಂದಿನ ಯುವಜನಾಂಗಕ್ಕೆ ಅಗತ್ಯವಾಗಿದೆ. ಈ ನಡುವೆ ದೇಶವು ಇನ್ನಷ್ಟು ಪ್ರಗತಿ ಸಾಧಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಾಮಾನ್ಯ ಜನರಿಗೂ ಕೂಡಾ ವಿವಿಧ ಮೂಲಸೌಲಭ್ಯಗಳು ಲಭ್ಯವಾಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಶಂಭು ಭಟ್ , ಪುತ್ತೂರು ಜೆಎಂಎಫ್ಸಿ ಹಾಗೂ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಸೋಮಶೇಖರ ಸಿ ಬಾದಾಮಿ , ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ , ಸಹಾಯಕ ಪೊಲೀಸ್ ಅಧೀಕ್ಷಕ ಎಂ.ಎನ್.ಅನುಚೇತ್ ಮಾತನಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಹಸೀಲ್ದಾರ್ ಕುಳ್ಳೇಗೌಡ , ತಾಪಂ ಸದಸ್ಯರು , ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿ ಯಶವಂತ್ ಉಪನ್ಯಾಸ ನೀಡಿದರು.---------------
No comments:
Post a Comment